ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಪತ್ತೆಗೆ ತಂಡ ರಚನೆ!

ಬೆಂಗಳೂರು ನಗರ

1/21/20251 ನಿಮಿಷ ಓದಿ

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಅತ್ಯಾಚಾರ ನಡೆಸಿ ನನ್ನ ಬಳಿ ಇದ್ದ ಚಿನ್ನಾಭರಣ, ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಯುವತಿಯೋಬ್ಬಳು ಬೆಂಗಳೂರಿನ ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸ್ ತಂಡ ರಚನೆ ಮಾಡಲಾಗಿದೆ. ಎರಡು ಪೊಲೀಸ್ ತಂಡ ರಚನೆ ಮಾಡಿ ಶೋಧ ಕಾರ್ಯ ಶುರು ಮಾಡಿದ್ದಾರೆ. ಭಾನುವಾರ ರಾತ್ರಿ 11.30ರಿಂದ 1 ಗಂಟೆಯೊಳಗೆ ಈ ಕೃತ್ಯ ಜರುಗಿದೆ.

ಸಿಸಿಟಿವಿ ಇರದ ಸ್ಥಳದಲ್ಲಿ ಕೃತ್ಯ

ಕೆಆರ್ ಮಾರ್ಕೆಟ್ ಬಳಿ ಗೋಡೌನ್ ಸ್ಟ್ರೀಟ್ ರಸ್ತೆಯಲ್ಲಿ ಈ ಘಟನೆ ಜರುಗಿದ್ದು, ಸಿಸಿಟಿವಿ ಇರದ ಸ್ಥಳದಲ್ಲಿ ಇಬ್ಬರು ದುಷ್ಕರ್ಮಿಗಳು ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಈ ಹಿಂದೆ ಸರಗಳ್ಳಗನ, ಮೊಬೈಲ್, ಬೈಕ್, ಆಟೋ ಕಳ್ಳತನ ಆಗಿದೆ. ಆದರೆ ಇದೇ ಮೊದಲ ಬಾರಿಗೆ ಇಲ್ಲಿ ಅತ್ಯಾಚಾರ ಪ್ರಕರಣ ನಡೆದಿರೋದು ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ.

ಸ್ಥಳೀಯರು ಹೇಳೋದೇನು?

ಇಲ್ಲಿ ವ್ಯಾಪಾರಕ್ಕೆ ನಸುಕಿನ 2 ಗಂಟೆಗೆ ರೈತರು ಆಗಮಿಸುತ್ತಾರೆ. ಜನರು ಬೆಳಗಿನ ಜಾವ 4 ಗಂಟೆಯಿಂದ ಓಡಾಡಲು ಶುರು ಮಾಡುತ್ತಾರೆ. ಗಾಂಜಾ, ದುಷ್ಚಟಗಳಿಗೆ ದಾಸರಾದ ಹುಡುಗರು, ವ್ಯಕ್ತಿಗಳಿಂದ ಇಂತ ಕೃತ್ಯ ಆಗಿರಬಹುದು ಎಂದು ಕಳೆದ 30 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು ಮತ್ತು ಆಟೋ ಚಾಲಕರು ಹೇಳಿದ್ದಾರೆ.

ಘಟನೆ ನಡೆದದ್ದು ಹೇಗೆ?

ಯಲಹಂಕಗೆ ಹೋಗಲು ರಾತ್ರಿ 11.30ರ ಸುಮಾರಿಗೆ ಬಸ್ಗಾಗಿ ಕೆಆರ್ ಮಾರುಕಟ್ಟೆಯಲ್ಲಿ ಕಾಯುತ್ತಿರುವಾಗ ಕಾರಿನಲ್ಲಿ ಬಂದ ಇಬ್ಬರು ಯುವಕರು ಯುವತಿ ಬಳಿ ಎಲ್ಲಿಗೆ ಹೋಗಬೇಕು, ಡ್ರಾಪ್ ಏನಾದ್ರೂ ಬೇಕಾ ಎಂದು ಕೇಳಿದ್ದರಂತೆ. ಈ ವೇಳೆ ಯುವತಿ ಡ್ರಾಪ್ ಬೇಡ, ಬಸ್ ನಿಲ್ದಾಣ ಎಲ್ಲಿದೆ ಎಂದು ಕೇಳಿದ್ದಳಂತೆ, ಈ ವೇಳೆ ಬಸ್ ಸ್ಟ್ಯಾಂಡ್ಗೆ ಬಿಡ್ತೀವಿ ಬನ್ನಿ ಅಂತ ಕಾರಿನಲ್ಲಿ ಹತ್ತಿಸಿಕೊಂಡರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಬೇರೊಂದು ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ

ಯುವತಿಯನ್ನು ಕಾರಿಗೆ ಹತ್ತಿಸಿಕೊಂಡ ಯುವಕರು ಮಾರುಕಟ್ಟೆ ಮೂಲಕ ಬೇರೊಂದು ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿರುವುದಾಗಿ ಯುವತಿ ಆರೋಪಿಸಿದ್ದಾಳೆ. ಸದ್ಯ ಸಂತ್ರಸ್ತ ಯುವತಿ ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಅನ್ವಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಪರಿಶೀಲನೆಗೆ ಮುಂದಾಗಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿಟಿವಿಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.

ತಮಿಳುನಾಡಿನಿಂದ ಅಣ್ಣನ ಮನೆಗೆಂದು ಬಂದಿದ್ದ ಯುವತಿ, ಯಲಹಂಕ ಬಸ್ಸಿಗಾಗಿ ಕೆ.ಆರ್ ಮಾರುಕಟ್ಟೆಯಲ್ಲಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಮಹಿಳೆಗೆ ಬಸ್ ನಿಲ್ದಾಣ ತೋರಿಸುವುದಾಗಿ ನಂಬಿಸಿ ಗೋಡೌನ್ನ ಸ್ಟ್ರೀಟ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವುದಾಗಿ ಯುವತಿ ಆರೋಪಿಸಿ ದೂರು ನೀಡಿದ್ದಾಳೆ. ಮಾತ್ರವಲ್ಲ ಇಬ್ಬರು ಸೇರಿ ಅತ್ಯಾಚಾರ ಎಸಗಿ ಬಳಿಕ ಮಹಿಳೆಯ ಮೊಬೈಲ್, ಹಣ, ತಾಳಿ, ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ ಎಂದು ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.